ಕ್ಷೇತ್ರ ಅಧ್ಯಯನದ ಅಂಗವಾಗಿ ಸೋವಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲ್ಕುತ್ರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಬಿಳಗಿ ಸಂಸ್ಥಾನದ ಶ್ವೇತಪುರದ ವಾಸ್ತುಶಿಲ್ಪ ಹಾಗೂ ಪುರಾತನ ಸ್ಥಳಗಳನ್ನು ತಿಳಿದುಕೊಂಡರು.

ಗವಿಬಾವಿ (ಗೋಲಬಾವಿ), ದಾಡೇಗಲ್ಲ ಕೇರಿಯ ವಿರೂಪಾಕ್ಷ ದೇವಾಲಯ, ಅಗ್ರಹಾರದಲ್ಲಿರುವ ವಾದಿರಾಜ ಮಠ ಹಾಗೂ ಶ್ರೀ ಲಕ್ಷ್ಮಿ ನಾರಾಯಣ ಗುಡಿಯನ್ನು ವೀಕ್ಷಿಸಿದರು. ಅಲ್ಲಿಂದ ಕುಮಟಾ ರಸ್ತೆಯ ಪಕ್ಕದಲ್ಲಿರುವ ಬಿಳಗಿ ರಾಜರ ಕಾಲದ ಹೊಸಕೆರೆಯನ್ನು ವೀಕ್ಷಿಸಿದರು.

ಕ್ರಿ.ಶ. 1588 ರಲ್ಲಿ ನಿರ್ಮಿಸಿದ ರತ್ನತ್ರಯ ಬಸದಿಯಲ್ಲಿರುವ ಶ್ರೀ ನೇಮಿನಾಥ, ಶ್ರೀ ಪಾರ್ಶ್ವನಾಥ ಹಾಗೂ ಶ್ರೀ ವರ್ಧಮಾನ ಪ್ರತಿಮೆಯ ಕುರಿತು ಮಾರ್ಗದರ್ಶಕರಿಂದ ತಿಳಿದುಕೊಂಡರು. ಬಸದಿಯ ದ್ವಾರದ ಬಳಿ ಇರುವ ಶ್ರೀಮತ್ ಭಟ್ಟಾಕಳಂಕರ ಶಾಸನದ ಕುರಿತು ತಿಳಿದುಕೊಂಡರು. ಅಲ್ಲಿಂದ ಹಳೆ ಬಿಳಗಿಯಲ್ಲಿ ರಾಜರು ನಿರ್ಮಿಸಿದ ಕೆರೆಯನ್ನು ಹಾಗೂ ವೀರಶೈವರ ದೇವಾಲವಾದ ಶ್ರೀ ವೀರಭದ್ರ ಗುಡಿಗೆ ಭೇಟಿ ನೀಡಿದರು. ಬಿಳಗಿ ಸಂಸ್ಥಾನವನ್ನು ಆಳ್ವಿಕೆ ಕಾಲದಲ್ಲಿ ಅರಮನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ವೀರಶೈವ ಮತಕ್ಕೆ ಸೇರಿದ ಶ್ರೀಮತಿ ಜಯಮ್ಮ ಶಿವಾಜಿ ಗೌಡರ್ ಇವರನ್ನು ಭೇಟಿ ಮಾಡಿ ರಾಜರ ಕಾಲದ ಕೆಲವು ಸಂಗತಿಗಳನ್ನು ತಿಳಿದುಕೊಂಡರು. ಇಡೀ ಬಿಳಗಿಯಲ್ಲಿ ಲಿಂಗಾಯತ ಸಮುದಾಯಕ್ಕೆ ಸೇರಿದ ಏಕೈಕ ಕುಟುಂಬವಾಗಿದೆ.

ಅಲ್ಲಿಂದ ನೆಲಗುತ್ತಿ ಬಯಲಿಗೆ ಸಮೀಪದಲ್ಲಿರುವ ಶ್ರೀ ಕಲ್ಯಾಣೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಅಲ್ಲಿನ ಈಶ್ವರ ಲಿಂಗದ ದರ್ಶನ ಪಡೆದರು. ಮಾರ್ಗದರ್ಶಕರಾಗಿ ಬಸದಿ ರಕ್ಷಕರಾದ ಶ್ರೀ ನಾಗರಾಜ ಡಿ. ಮಡಿವಾಳ ಹಾಗೂ ಶಿಕ್ಷಕ ದರ್ಶನ ಹರಿಕಾಂತ ಶ್ರೇತಪುರದ ಕುರಿತಾಗಿ ಮಾಹಿತಿಯನ್ನು ಮಕ್ಕಳಿಗೆ ನೀಡಿದರು. ಹುಲ್ಕುತ್ರಿ ಶಾಲೆಯ 4 ರಿಂದ 7 ನೇ ತರಗತಿಯ 29 ವಿದ್ಯಾರ್ಥಿಗಳು ಅಧ್ಯಯನದಲ್ಲಿ ಪಾಲ್ಗೊಂಡಿದ್ದರು. ಸಹ ಶಿಕ್ಷಕರಾದ ಮೈತ್ರಿ ಹೆಗಡೆ, ರಂಜನಾ ಭಂಡಾರಿ ಹಾಗೂ ನಾಗರತ್ನ ಭಂಡಾರಿ ಮಕ್ಕಳ ಜೊತೆಗಿದ್ದರು.

https://www.facebook.com/share/p/GSNdZNa3z7qEPXn9/?mibextid=w8EBqM

ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ