ಪ್ರತಿ ವರ್ಷದಂತೆ ಈ ವರ್ಷವೂ ತಾಲೂಕಿನ ಹಿರಿಯ ಪ್ರಾಥಮಿಕ ಶಾಲೆ ಹುಲ್ಕುತ್ರಿಯ ವಿದ್ಯಾರ್ಥಿಗಳು ಇಕೋ ಕ್ಲಬ್ ನ ಅಡಿಯಲ್ಲಿ ಭತ್ತದ ಸಸಿ ನಾಟಿ ಮಾಡಿ ಕೃಷಿ ಅಧ್ಯಯನ ಪ್ರಾರಂಭಿಸಿದರು.

ರಜಾ ದಿನವಾದ ಭಾನುವಾರದಂದು ಶಾಲೆಯ ಪಕ್ಕದ ಊರಾದ ಹೆಮಜೆನಿಯ ಲೋಕೇಶ ಪದ್ಮನಾಭ ಗೌಡರ ಗದ್ದೆಯಲ್ಲಿ ಶಾಲೆಯ ಆಸಕ್ತ 11 ವಿದ್ಯಾರ್ಥಿಗಳು ನಾಟಿ ಕಾರ್ಯದಲ್ಲಿ ನಿರತರಾಗಿದ್ದರು. ಎಸ್.ಡಿ.ಎಮ್.ಸಿ. ಉಪಾಧ್ಯಕ್ಷರಾದ ವಾಣಿ ನಿತ್ಯಾನಂದ ಗೌಡ ದೀಪ ಬೆಳಗಿಸಿ ನಾಟಿ ಕಾರ್ಯಕ್ಕೆ ಚಾಲನೆ ನೀಡಿದರು. ನಂತರ ಮುಖ್ಯ ಶಿಕ್ಷಕರಾದ ದರ್ಶನ ಹರಿಕಾಂತ ಹಾಗೂ ಗಂಗೆ ಮಾಬ್ಲ ಗೌಡ ಇವರು ಸಸಿ ನೆಡುವ ರೀತಿ ಹಾಗೂ ಸಸಿಯ ಅಂತರವನ್ನು ತಿಳಿಸಿಕೊಟ್ಟರು.

ಈ ವರ್ಷ ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿರುವ ಕೊಡಗಿನ ಕೆ ಎಚ್ ಬಿ-11 ತಳಿಯನ್ನು ವಿದ್ಯಾರ್ಥಿಗಳಿಂದ ನೆಡೆಸಲಾಯಿತು. ಇದು ಸಣ್ಣಕ್ಕಿ ಆಗಿದ್ದು, ಪೈರು ಎತ್ತರವಾಗಿ ಬೆಳೆದು ಅಧಿಕ ಇಳುವರಿಯನ್ನು ನೀಡುತ್ತದೆ. ಮಲೆನಾಡಿನ ಇಲ್ಲಿನ ಮಣ್ಣಿಗೆ ಸರಿಯಾಗಿ ಹೊಂದಾಣಿಕೆ ಆಗುತ್ತದೆ. ಅಲ್ಲದೆ ಉತ್ತಮ ಗುಣಮಟ್ಟದ ಅನ್ನವನ್ನು ಪಡೆಯಬಹುದಾಗಿದೆ. ಇದರ ಬೀಜವನ್ನು ವಂದಾನೆಯ ಪ್ರಗತಿಪರ ಕೃಷಿಕರಾದ ನಾಗರಾಜ ಶ್ರೀನಿವಾಸ ಶಾನಭಾಗ ನೀಡಿ ಮಕ್ಕಳ ಕಾರ್ಯಕ್ಕೆ ಪ್ರೋತ್ಸಾಹ ನೀಡಿದ್ದಾರೆ. ಹಾಗೇ ಈ ಕುರಿತು ಅಗತ್ಯ ಮಾರ್ಗದರ್ಶನವನ್ನು ಬಿಳಗಿಯ ಪ್ರಗತಿಪರ ಕೃಷಿಕರಾದ ರವಿಲೋಚನಾ ಮಡಗಾಂವಕರ ರವರು ನೀಡಿದ್ದಾರೆ.
ಒಟ್ಟಿನಲ್ಲಿ ಈ ಭಾಗದ ರೈತರಿಗೆ ಕೊಡಗಿನ ಹೈಬ್ರೀಡ್ ತಳಿಯನ್ನು ಪರಿಚಯಿಸುತ್ತ ಕೃಷಿ ಅಧ್ಯಯನವನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಿದ್ದಾರೆ. ಅಂದಾಜು 4 ಗುಂಟೆ ಕ್ಷೇತ್ರದಲ್ಲಿ ತುಂಬಾ ಸಲೀಸಾಗಿ ನಾಟಿ ಕಾರ್ಯ ಮಾಡಿ ತಮ್ಮ ಕೃಷಿ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ.
ಸ್ಥಳದಲ್ಲಿ ಎಸ್.ಡಿ.ಎಮ್.ಸಿ. ಉಪಾಧ್ಯಕ್ಷರಾದ ವಾಣಿ ನಿತ್ಯಾನಂದ ಗೌಡ, ಲೋಕೇಶ ಪದ್ಮನಾಭ ಗೌಡ, ಜಗದೀಶ ಪದ್ಮನಾಭ ಗೌಡ, ಗಂಗೆ ಮಾಬ್ಲ ಗೌಡ ಹಾಗೂ ಮುಖ್ಯ ಶಿಕ್ಷಕ ದರ್ಶನ ಹರಿಕಾಂತ ಉಪಸ್ಥಿತರಿದ್ದರು.



* * * * * * *