ಉತ್ತರ ಭಾರತದ ಪ್ರಾಚೀನ ರಾಜ ಮನೆತನಗಳು – ಅಧ್ಯಾಯ-12
ಪಾಠದ ಪರಿಚಯ
ಮೌರ್ಯ ಸಾಮ್ರಾಜ್ಯವು ಭಾರತದ ಪ್ರಥಮ ಐತಿಹಾಸಿಕ ಸಾಮ್ರಾಜ್ಯ. ವಿವಿಧ ಕ್ಷೇತ್ರಗಳಿಗೆ ಅದು ನೀಡಿದ ಕೊಡುಗೆ ಅಪೂರ್ವವಾದುದ್ದು. ಚಂದ್ರಗುಪ್ತ ಮೌರ್ಯ ಮತ್ತು ಅಶೋಕ ಈ ವಂಶದ ಹೆಸರಾಂತ ಸಾಮ್ರಾಟರು. ಇವರ ಜೀವನ ಮತ್ತು ಸಾಧನೆಗಳನ್ನು ವಿವರಿಸಲಾಗಿದೆ. ಕುಶಾನ ವಂಶದ ಪ್ರಸಿದ್ಧ ದೊರೆ ಕನಿಷ್ಕನ ಕೊಡುಗೆಗಳನ್ನೂ ಸ್ಮರಿಸಲಾಗಿದೆ. ನಂತರ ಗುಪ್ತರಲ್ಲಿ ಶ್ರೇಷ್ಠ ದೊರೆಯಾದ ಸಮುದ್ರಗುಪ್ತನ ದಿಗ್ವಿಜಯ ಮತ್ತು ಎರಡನೇ ಚಂದ್ರಗುಪ್ತನ ಕಾಲದಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಅದ್ಭುತ ಮುನ್ನಡೆಯನ್ನು ವಿವರಿಸಲಾಗಿದೆ. ಹರ್ಷವರ್ಧನ ಸಂಕಷ್ಟಮಯ ಕಾಲದಲ್ಲಿ ಸಾಮ್ರಾಜ್ಯವನ್ನು ರಕ್ಷಿಸಿದ ಬಗೆ ಮತ್ತು ಬೌದ್ಧಧರ್ಮದ ಏಳಿಗೆಗೆ ಸಲ್ಲಿಸಿದ ಕಾಣಿಕೆಯನ್ನು ಪರಿಚಯಿಸಲಾಗಿದೆ. ಸಾ.ಶ. 620 ರಿಂದ ಸಾ.ಶ. 1200ರ ಕಾಲಾವಧಿಯ ಕಾರ್ಕೋಟ, ಅಹೋಮ್ ಹಾಗೂ ರಜಪೂತ ವಂಶಗಳ ಇತಿಹಾಸ, ಅವರ ಆರ್ಥಿಕ, ಸಾಮಾಜಿಕ, ಸಾಹಿತ್ಯಕ ಕೊಡುಗೆಗಳನ್ನು ತಿಳಿಸಲಾಗಿದೆ. ಜೊತೆಗೆ ರಜಪೂತರ ಪ್ರಮುಖ ವಂಶಗಳಾದ ಗುರ್ಜರ ಪ್ರತಿಹಾರರು, ಚೌಹಾಣರು, ಪಾಲರು, ಪ್ರತಿಹಾರರು
ಬಗ್ಗೆ ತಿಳಿಸಲಾಗಿದೆ.
ವರ್ಧನರು :- ಗುಪ್ತ ಸಾಮ್ರಾಜ್ಯದ ಅವನತಿಯ ನಂತರ ಉತ್ತರ ಭಾರತದಲ್ಲಿ ಹಲವು ಸಣ್ಣಪುಟ್ಟ ರಾಜಮನೆತನಗಳು ತಲೆ ಎತ್ತಿದವು. ಅವುಗಳಲ್ಲಿ ಥಾಣೇಶ್ವರದ ಪುಷ್ಯಭೂತಿ ಮನೆತನವೂ ಒಂದು. ಇದು ವರ್ಧನ ಮನೆತನ ಎಂದೇ ಪ್ರಸಿದ್ಧವಾಗಿದೆ. ಹರ್ಷವರ್ಧನನು ಈ ಮನೆತನದ ಜನಪ್ರಿಯ ದೊರೆಯಾಗಿದ್ದನು.



















