ರಾಷ್ಟ್ರೀಯ ಚಿಹ್ನೆಗಳು ಮತ್ತು ರಾಷ್ಟ್ರೀಯ ಭಾವೈಕ್ಯತೆ

ರಾಷ್ಟ್ರೀಯ ಚಿಹ್ನೆಗಳು :
ಸಾಮಾನ್ಯವಾಗಿ ಒಂದು ದೇಶವು ತನ್ನ ಸಂಸ್ಕೃತಿ ಮತ್ತು ಪರಂಪರೆಗಳ ವಿಶೇಷತೆಗಳನ್ನು ಪ್ರತಿಬಿಂಬಿಸುವ ಕೆಲವು ಚಿಹ್ನೆಗಳನ್ನು ಬಳಕೆ ಮಾಡುತ್ತದೆ. ಅವುಗಳನ್ನು ರಾಷ್ಟ್ರೀಯ ಚಿಹ್ನೆಗಳು ಎನ್ನುವರು.


ನಮ್ಮ ರಾಷ್ಟ್ರಗೀತೆ :
- ‘ಜನಗಣಮನ’ ಭಾರತದ ರಾಷ್ಟ್ರಗೀತೆ.
- ಇದನ್ನು ರವೀಂದ್ರನಾಥ ಠಾಕೂರ್ ಅವರು 1911ರಲ್ಲಿ ಬಂಗಾಲಿ ಭಾಷೆಯಲ್ಲಿ ರಚಿಸಿದರು.
- ನಮ್ಮ ಸಂವಿಧಾನ 24 ಜನವರಿ 1950 ರಂದು ಅಂಗೀಕರಿಸಿತು.
- ಗೀತೆಯನ್ನು ಹಾಡಲು ಬೇಕಾಗುವ ಕಾಲಾವಧಿ 52 ಸೆಕೆಂಡುಗಳು.
- ರಾಷ್ಟ್ರಗೀತೆಯನ್ನು ಹಾಡುವಾಗ ಶಿಸ್ತಿನಿಂದ ನೇರವಾಗಿ ನಿಲ್ಲಬೇಕು.
- ಉಚ್ಛಾರದಲ್ಲಿ ತಪ್ಪಿಲ್ಲದಂತೆ ಹಾಡಬೇಕು.

ನಮ್ಮ ರಾಷ್ಟ್ರ ಧ್ವಜ :
- ನಮ್ಮದು ಮೂರು ಬಣ್ಣಗಳಿಂದ ಕೂಡಿದ ಧ್ವಜವಾಗಿದೆ.
- ಮೇಲೆ ಕೇಸರಿ, ಮಧ್ಯ ಬಿಳಿ ಮತ್ತು ಕೆಳಗೆ ಹಸಿರು ಬಣ್ಣಗಳಿವೆ.
- ಬಿಳಿ ಬಣ್ಣದ ಮಧ್ಯದಲ್ಲಿ ನೀಲಿ ಬಣ್ಣದ ಚಕ್ರವಿದೆ.
- ಚಕ್ರದಲ್ಲಿ ಇಪ್ಪತ್ತನಾಲ್ಕು ಅರಗಳಿಗೆ.
- ಚಕ್ರದ ವ್ಯಾಸ ಬಿಳಿ ಪಟ್ಟಿಯ ಅಗಲದಷ್ಟೇ ಇದೆ.
- ಧ್ವಜವು ಆಯಾತಾಕಾರವಾಗಿದೆ. ಉದ್ದಗಲಗಳ ಅನುಪಾತ 3:2 ಇರುತ್ತದೆ.
- ಧ್ವಜದ ಬಟ್ಟೆಯು ಹತ್ತಿ ಮತ್ತು ರೇಷ್ಮೆಯದ್ದಾಗಿರಬೇಕು. ಜೊತೆಗೆ ಅದು ಕೈನೇಯ್ಗೆಯದ್ದಾಗಿರಬೇಕು.
- ಅದರ ದಾರ ಕೈಯಿಂದಲೇ ಮಾಡಿದ್ದಾಗಿರಬೇಕು.

ರಾಷ್ಟ್ರಧ್ವಜದ ವಿಶೇಷತೆ :
- ಕೇಸರಿ ಬಣ್ಣ – ನಿಸ್ವಾರ್ಥ ಮತ್ತು ತ್ಯಾಗವನ್ನು ಸಂಕೇತಿಸುತ್ತದೆ.
- ಬಿಳಿಬಣ್ಣ – ಸತ್ಯ, ಶಾಂತಿ, ಪರಿಶುದ್ಧತೆಯ ಪ್ರತೀಕವಾಗಿದೆ.
- ಹರಿಸು ಬಣ್ಣ – ಸಸ್ಯಶ್ಯಾಮಲೆಯಾದ ಭೂಮಿಯ ಸಂಕೇತ; ಕೃಷಿ, ಕೈಗಾರಿಕೆಗಳ ಸಮೃದ್ಧಿಯ ಗುರುತು.
- ಚಕ್ರವು ಸಾರಾನಾಥದ ಅಶೋಕ ಸ್ತಂಭದಲ್ಲಿರುವ ಚಕ್ರದ ಪ್ರತಿರೂಪವಾಗಿದೆ.
- ಅಶೋಕ ಚಕ್ರವು ನಿರಂತರ ಚಲನೆಯ ಹಾಗೂ ಪ್ರಗತಿಯ ಪ್ರತೀಕವೂ ಹೌದು.


ರಾಷ್ಟ್ರಧ್ವಜ ಸಂಹಿತೆ :
- ಧ್ವಜ ಕೊಳೆಯಾಗಿರಬಾರದು, ಹರಿದಿರಬಾರದು.
- ಹಾರಿಸುವಾಗ ಯಾವಾಗಲೂ ಕೇಸರಿ ಬಣ್ಣ ಮೇಲೆ ಬರುವಂತೆ ಹಾರಿಸಬೇಕು.
- ರಾಷ್ಟ್ರಧ್ವಜದ ಎತ್ತರಕ್ಕೆ ಬೇರಾವ ಧ್ವಜವನ್ನು ಹಾರಿಸಬಾರದು.
- ಕಂಬದ ತುದಿಯವರೆಗೂ ಮೇಲೇರಿಸಿ ಹಾರಿಸಬೇಕು.
- ಯಾವಾಗಲೂ ಸೂರ್ಯೋದಯದ ನಂತರ ರಾಷ್ಟ್ರಧ್ವಜವನ್ನು ಹಾರಿಸಬೇಕು. ಸೂರ್ಯಾಸ್ತಕ್ಕೆ ಮೊದಲು ಇಳಿಸಿ ಮಡಿಚಿಡಬೇಕು.
- ರಾಷ್ಟ್ರೀಯ ಶೋಕವನ್ನು ಆಚರಿಸುವ ಸಮಯದಲ್ಲಿ ಧ್ವಜವನ್ನು ಅರ್ಧ ಎತ್ತರಕ್ಕೆ ಹಾರಿಸುವುದು.
- ಧ್ವಜವನ್ನು ಬಲಗೈಲಿ ಹಿಡಿದು ನಡೆಯಬೇಕು.
- ಧ್ವಜವನ್ನು ನೆಲಕ್ಕೆ ತಾಗಿಸಬಾರದು.




ನಮ್ಮ ರಾಷ್ಟ್ರಲಾಂಛನ :
- ಇದು ಸಾರಾನಾಥದ ಅಶೋಕನ ಶಿಲಾಸ್ತಂಭದ ಬೋದಿಗೆಯ (ಮೇಲುಭಾಗದ) ರೂಪಾಂತರವಾಗಿದೆ.
- ಬೋದಿಗೆಯಲ್ಲಿ ಸಿಂಹಗಳಿರುವುದರಿಂದ ಇದನ್ನು ‘ಸಿಂಹ ಬೋದಿಗೆ’ ಎನ್ನುವರು.
- ನಮ್ಮ ರಾಷ್ಟ್ರಲಾಂಛನ ಅಥವಾ ಮುದ್ರೆ ಮೂಲ ಶಿಲ್ಪಾಕೃತಿಯಲ್ಲಿ ನಾಲ್ಕು ಸಿಂಹಗಳು ನಾಲ್ಕು ದಿಕ್ಕುಗಳಿಗೆ ಮುಖಮಾಡಿ, ಒಂದಕ್ಕೊಂದು ಬೆನ್ನು ಮಾಡಿ, ಪೀಠವೊಂದರ ಮೇಲೆ ನಿಂತಿವೆ.
- ಪೀಠವು ಗುಂಡಾಗಿದೆ. ಅದರ ನಾಲ್ಕು ದಿಕ್ಕುಗಳಲ್ಲೂ ಒಂದೊಂದು ಚಕ್ರವಿದೆ.
- ಆ ಚಕ್ರಗಳ ನಡುವೆ ಆನೆ, ಗೂಳಿ, ಕುದುರೆ, ಸಿಂಹಗಳ ಚಿತ್ರಣವಿದೆ. ಪೀಠದಲ್ಲಿರುವ ಚಕ್ರವನ್ನು ‘ಧರ್ಮಚಕ್ರ’ವೆಂದೂ ಕರೆಯುತ್ತಾರೆ. ನಮ್ಮ ರಾಷ್ಟ್ರಧ್ವಜದ ಬಿಳಿಯ ಪಟ್ಟಿಯ ನಡುವೆ ಚಕ್ರದ ಚಿಹ್ನೆಯಿದೆ.
- ಭಾರತ ಸರ್ಕಾರವು ನಮ್ಮ ರಾಷ್ಟ್ರಲಾಂಛನವನ್ನು 26 ಜನವರಿ 1950ರಂದು ಅಂಗೀಕರಿಸಿತು.
- ಪೀಠದ ಕೆಳಗೆ ದೇವನಾಗರಿ ಲಿಪಿಯಲ್ಲಿ ಬರೆದ “ಸತ್ಯಮೇವ ಜಯತೆ” (ಸತ್ಯವೊಂದೇ ಗೆಲ್ಲುತ್ತದೆ) ಎಂಬ ಮುಂಡಕ ಉಪನಿಷತ್ತಿನ ವಾಕ್ಯವಿದೆ.


ರಾಷ್ಟ್ರೀಯ ಪ್ರಾಣಿ ಹಾಗೂ ರಾಷ್ಟ್ರೀಯ ಪಕ್ಷಿ :
- ಹುಲಿ ನಮ್ಮ ರಾಷ್ಟ್ರೀಯ ಪ್ರಾಣಿ. ನೋಡಲು ಅದು ಆಕರ್ಷಕ ಹಾಗೂ ಗಂಭೀರ, ಬಲಿಷ್ಠ ಮೈಕಟ್ಟು.
- ನವಿಲು ಭಾರತದ ರಾಷ್ಟ್ರೀಯ ಪಕ್ಷಿ. ಕೆಂಪು ಮತ್ತು ಹಳದಿ ಮಿಶ್ರ ಬಣ್ಣದ ರೆಕ್ಕೆ; ತಲೆಯ ಮೇಲೆ ತುರಾಯಿಯಂತಿರುವ ಗರಿಯುಳ್ಳ ನವಿಲು ನೋಡಲು ಮನೋಹರ.

ರಾಷ್ಟ್ರೀಯ ಭಾವೈಕ್ಯತೆಯ ಅರ್ಥ :
ರಾಷ್ಟ್ರೀಯ ಭಾವೈಕ್ಯವೆಂದರೆ ಒಬ್ಬರು ಇನ್ನೊಬ್ಬರ ಬಗ್ಗೆ ಅಥವಾ ಒಂದು ಜನಾಂಗ ಇನ್ನೊಂದು ಜನಾಂಗದ ಬಗ್ಗೆ ದ್ವೇಷ, ಅಸೂಯೆ ಮತ್ತು ಪೂರ್ವಾಗ್ರಹ ಪೀಡಿತರಾಗದೆ ಒಂದು ಎಂಬ ಭಾವನೆಯಿಂದ ಬದುಕುವುದು. ಬದಲಾಗಿ ಒಬ್ಬರು ಇನ್ನೊಬ್ಬರನ್ನು ಗೌರವಿಸುವುದು ಹಾಗೂ ಪರಸ್ಪರ ಸೌಹಾರ್ದತೆಯಿಂದ ಇರುವುದು.

ರಾಷ್ಟ್ರೀಯ ಭಾವೈಕ್ಯತೆಯ ಪ್ರಾಮುಖ್ಯತೆ :
- ದೇಶದ ಸಮಗ್ರತೆ
- ಸೋದರತೆ
- ಸಮಾನತೆಗೆ ಪ್ರಮುಖ ಪ್ರೇರಣೆಯಾಗುತ್ತದೆ.

ರಾಷ್ಟ್ರೀಯ ವೈವಿಧತೆಯು –
- ಪ್ರಾಕೃತಿಕ ವೈವಿಧ್ಯ
- ಜೀವ ವೈವಿಧ್ಯ
- ಜನ ವೈವಿಧ್ಯದಲ್ಲಿ ಪ್ರಕಟಗೊಂಡಿದೆ.

ಬಹುತ್ವದಲ್ಲಿ ಏಕತೆ :
ವಿವಿಧ ಭಾಷೆ, ಸಂಸ್ಕೃತಿ, ಧರ್ಮಗಳಲ್ಲಿ ನಂಬಿಕೆ ಇಟ್ಟಿರುವ ಬಹುಸಂಸ್ಕೃತಿಯ ಜನರು ಇಲ್ಲಿ ವಾಸವಾಗಿದ್ದಾರೆ. ವಿಭಿನ್ನ ಧರ್ಮಗಳುಳ್ಳ ನಮ್ಮ ದೇಶದಲ್ಲಿ ಪ್ರತಿಯೊಬ್ಬ ಪ್ರಜೆಯೂ ತನಗಿಷ್ಟ ಬಂದ ಧರ್ಮವನ್ನು ಅನುಸರಿಸಬಹುದಾಗಿದೆ. ಈ ಹಲವು ಭಿನ್ನತೆಗಳಿಂದ ಒಂದು ರಾಷ್ಟ್ರದಲ್ಲಿ ವಾಸಿಸುವ ಜನರು ಐಕ್ಯತೆಯಿಂದಿರುವುದರಿಂದ ಬಹುತ್ವದಲ್ಲೂ ಏಕತೆಯನ್ನು ಕಾಣಬಹುದಾಗಿದೆ.

ರಾಷ್ಟ್ರೀಯ ಏಕತೆಗೆ ಮಾರಕವಾದ ಅಂಶಗಳು :
- ಜಾತೀಯತೆ :- ಬೇರೆ ಜಾತಿಯ ವಿರುದ್ಧವಾಗಿ ತಮ್ಮ ಜಾತಿಯನ್ನು ಎತ್ತಿ ಕಟ್ಟುವುದು. ತಮ್ಮ ಜಾತಿಯೇ ಶ್ರೇಷ್ಠ, ಉಳಿದವು ಕನಿಷ್ಠವೆಂಬ ಮೇಲಿರಿಮೆಯೇ ಜಾತೀಯತೆ.
- ಮತೀಯವಾದ :- ಬೇರೆ ಧರ್ಮಕ್ಕಿಂತ ತಮ್ಮ ಧರ್ಮವೇ ಶ್ರೇಷ್ಠವಾದುದು ಎಂದು ನಂಬುವುದು ಮತ್ತು ಕೇವಲ ಧರ್ಮದ ಸಲುವಾಗಿ ಮಾತ್ರ ಹೊಡೆದಾಡುವುದು ಮತೀಯವಾದ ಅಥವಾ ಕೋಮುವಾದ.
- ಪ್ರಾದೇಶಿಕವಾದ :- ತನ್ನ ಪ್ರದೇಶದ ಕಾಳಜಿ ಕುರಿತು ವ್ಯಕ್ತಿಗಿರುವ ಏಕಪಕ್ಷೀಯ ನಿಷ್ಠೆ ಮತ್ತು ಸಂಕುಚಿತ ಭಾವನೆಯೇ ಪ್ರಾದೇಶಿಕವಾದ.