2021-21ನೇ ಸಾಲಿನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ದಾವಣಗೆರೆಯಲ್ಲಿ ಆಯೋಜನೆಯಾಗಿತ್ತು. ಈ ಕ್ರೀಡಾಕೂಟದಲ್ಲಿ ನಮ್ಮಶಾಲೆಯ ಸಹಶಿಕ್ಷಕಿ ರಂಜನಾ ಭಂಡಾರಿಯವರು ಶಿರಸಿ ಶೈಕ್ಷಣಿಕ ಜಿಲ್ಲೆಯನ್ನು ಪ್ರತಿನಿಧಿಸಿ 200 ಮೀ. ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲಿ ದ್ವಿತೀಯ ಸ್ಥಾನ ಪಡೆಯುವುದರ ಮೂಲಕ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಕ್ರೀಡೆಯಲ್ಲಿ ಸಿದ್ದಾಪುರ ತಾಲೂಕಿನಲ್ಲಿ ಶಿಕ್ಷಕಿಯೋರ್ವರು ಇಂತಹ ಸಾಧನೆ ಮಾಡಿರುವುದು ಬಲು ಅಪರೂಪ. ಈ ಮೂಲಕ ರಂಜನಾ ಅವರು ಶಾಲೆಯ ಹಾಗೂ ತಾಲೂಕಿನ ಕೀರ್ತಿಯನ್ನು ಬೆಳಗಿದ್ದಾರೆ. ಇದು ನಮಗೆಲ್ಲ ಅತ್ಯಂತ ಹೆಮ್ಮೆಯ ಸಂಗತಿ. ರಂಜನಾ ಟೀಚರ್ ಅವರ ಸಾಧನೆಗೆ ಶಾಲೆಯ ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಪಾಲಕ-ಪೋಷಕರು, ಎಸ್.ಡಿ.ಎಮ್.ಸಿ. ಸದಸ್ಯರುಗಳು, ಅಂಗನವಾಡಿ ಕಾರ್ಯಕರ್ತೆಯರು, ಸಮಸ್ಥ ಹಾವಿನಬೀಳು ನಾಗರಿಕರು, ತಾಲೂಕಿನ ಸಮಸ್ಥ ಶಿಕ್ಷಕರು ಹಾಗೂ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಸದಸ್ಯರುಗಳು ಅಭಿನಂದಿಸಿದ್ದಾರೆ.

ಬರಿಗಾಲಲ್ಲೇ ಓಡಿದ ರಂಜನಾ ಟೀಚರ್ !

ರಂಜನಾ ಟೀಚರ್ 200 ಮೀ. ಓಟದ ಸ್ಪರ್ಧೆಯಲ್ಲಿ ಭಾಗವಹಿಸುವುದರ ಜೊತೆಗೆ ಉದ್ದ ಜಿಗಿತ ಹಾಗೂ ಜಾನಪದ ನೃತ್ಯದಲ್ಲೂ ಭಾಗವಹಿಸಿದ್ದರು. ಓಟದ ಸ್ಪರ್ಧೆಗಾಗಿ ಬೆಳಿಗ್ಗಿನಿಂದ ಮಧ್ಯಾಹ್ನದ ವರೆಗೂ ಕಾದು ಕೊನೆಗೆ ಊಟಕ್ಕೆ ಹೋದರು. ಊಟ ಮಾಡುತ್ತಿರುವಾಗಲೇ 200 ಮೀ. ಓಟ ಸ್ವಲ್ಪ ಸಮಯದಲ್ಲೇ ಪ್ರಾರಂಭಿಸುತ್ತಾರೆ ಎಂಬ ಸುದ್ದಿ ತಿಳಿಯಿತು. ಕ್ರೀಡಾಂಗಣದಲ್ಲಿ ಆಗಲೇ ಓಟದ ಸ್ಪರ್ಧಾಳುಗಳು ಓಡಲು ಸಿದ್ಧರಾಗಿದ್ದರು. ನಿರ್ಣಾಯಕರು ಸೀಟಿ ಊದುವುದೊಂದೇ ಬಾಕಿ ಇತ್ತು. ತಕ್ಷಣ ಸಹಾಯಕ್ಕೆ ಧಾವಿಸಿದ ತಂಡದ ಸದಸ್ಯರಾದ ಶೀಲಾ ಆಲಳ್ಳಿಮಠ, ಸಹಶಿಕ್ಷಕರು ಸ.ಹಿ.ಪ್ರಾ. ಶಾಲೆ ಗೋಳಿಕೈ ಇವರು ಬೇಗನೇ ಹೋಗಿ ‘ನಮ್ಮವರೊಬ್ಬರು ಸ್ಪರ್ಧೆಗೆ ಭಾಗವಹಿಸುವವರಿದ್ದಾರೆ’ ಎಂದು ನಿರ್ಣಾಯಕರಲ್ಲಿ ವಿನಂತಿಸಿಕೊಂಡರು. ತಕ್ಷಣ ಬಂದ ರಂಜನಾ ಟೀಚರ್ ಗೆ ಸ್ಪೈಕ್ ಹಾಕಿಕೊಳ್ಳಲೂ ಸಮಯವಿರದ ಕಾರಣ ಬರಿಗಾಲಲ್ಲೇ ಓಡಬೇಕಾಯಿತು. ಓಟ ಪ್ರಾರಂಭವಾದಾಗ ತಳ್ಳಾಟದಿಂದಾಗಿ ಏಳನೇ ಸ್ಥಾನದಲ್ಲಿದ್ದ ರಂಜನಾ ಟೀಚರ್ ಕ್ರಮೇಣ ಓಟದ ವೇಗ ಹೆಚ್ಚಿಸಿಕೊಂಡು ದ್ವಿತೀಯ ಸ್ಥಾನ ಪಡೆದರು. ಸಾಧಿಸುವ ಛಲ ಹಾಗೂ ಗುರಿ ಸ್ಪಷ್ಟವಾಗಿದ್ದಲ್ಲಿ ಯಾವ ಅಡೆತಡೆಗಳೂ ನಮ್ಮನ್ನು ತಡೆಯಲಾರದು ಎಂಬುದಕ್ಕೆ ರಂಜನಾ ಟೀಚರ್ ಉದಾಹರಣೆ. ನಿಮ್ಮ ಸಾಧನೆ ಹೀಗೇ ಮುಂದುವರೆಯಲಿ. ರಾಷ್ಟ್ರಮಟ್ಟದಲ್ಲೂ ಕೀರ್ತಿ ತನ್ನಿ ಎಂದು ಈ ಮೂಲಕ ಹಾರೈಸುತ್ತೇವೆ.

ಹಾಗೇ ಸಿದ್ದಾಪುರ ತಾಲೂಕಿನಿಂದ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಸ.ಹಿ.ಪ್ರಾ. ಶಾಲೆ ಸೂರಗಾಲ ಶಿಕ್ಷಕರಾದ ಶ್ರೀ ಮಂಜುನಾಥ ನಾಯ್ಕ (70 ಕೆಜಿ ವೇಯ್ಟ್ ಲಿಫ್ಟಿಂಗ್) ಹಾಗೂ ಸ.ಕಿ.ಪ್ರಾ. ಶಾಲೆ, ಇಳಿಮನೆಯ ಶ್ರೀ ಶ್ಯಾಮಸುಂದರ (50 ಹಾಗೂ 100 ಮೀ. ಬಟರ್ ಫ್ಲೈ ಈಜು ಸ್ಪರ್ಧೆ) ಇವರು ರಾಷ್ಟ್ರಮಟ್ಟದಲ್ಲಿ ಕೀರ್ತಿ ಬೆಳಗಲಿ ಎಂದು ಹಾರೈಸುತ್ತೇವೆ.